Sunday, November 8, 2020

ಸ್ವರಚಿತ ಕವನ ೦೮/೧೧/೨೦೨೦

 ಕವನದ ಶೀರ್ಷಿಕೆ

*ಹೃದಯದ ಮಾತು*


ಜಾತಿ ಮತ ಪಂಥ ಬೇದಗಳ

ಗಂಟು ಕಟ್ಟಿ ಐಕ್ಯತೆಯಿಂದ ಒಡಗೂಡಿ

ಜಗದ ಜನರೆಲ್ಲ ಒಂದಾಗಿ ಬಾಳುತ

ವಿಶ್ವ ಭ್ರಾತೃತ್ವ ಸೌಹಾರ್ದತೆಯು ನೆಲೆಸಲಿ


ನಾನು ಶ್ರೇಷ್ಠ ನೀನು ಕನಿಷ್ಠ ಎಂಬ ಭಾವನೆ 

ಅಳಿಸಿ ಸರ್ವರು ಸಮ ಬಾಳು ಸಮ ಪಾಲು

ಎನ್ನೋ ಘೋಷ ವಾಕ್ಯ ನಾನು ಕೇಳಲು

ಆತುರದಿ ಕಾಯುವ ಕಾಲ ಒದಗಿ ಬರಲಿ


ಗಂಡು ಹೆಣ್ಣಿನ ನಡುವಿನ ತಾರತಮ್ಯದ

ಗೋಡೆ ಉರುಳಿ ಇಬ್ಬರು ಸಮಾನರು

ಅನ್ನೋ ಸಹ ಜೀವನ ನಡೆಸಲು ಅತೀ

ಆನಂದದಿ ನಲಿದಾಡಿ ಕುಣಿಯುವದು ಮನ


ಆಸ್ತಿ ಅಂತಸ್ತು ನೋಡಿ ಮಣೆ ಹಾಕುವದ

ಬಿಟ್ಟು ಬಡವ ಬಲ್ಲಿದ ಒಂದೆ ತಾಟಿನಲಿ

ಉಣ್ಣುವ ಅವಕಾಶ ಬಂದು ಎಲ್ಲರೂ ಪ್ರೇಮದಿ

ಮಾತು ಕಥೆ ಆಡಿದಾಗಲೇ ನನ್ನ ಸಂಭ್ರಮವು


ಎಲ್ಲರ ಮನೆಯಲ್ಲೂ ತಂದೆ ತಾಯಿಯರ ಬಳಿ

ಅನುರಾಗದ ಮಾತಾಡಿ ಅತ್ತೆ ಸೊಸೆ ಪರಸ್ಪರ

ಕೂಡಿ ಅನ್ಯೋನ್ಯವಾಗಿದ್ದು ಹಿರಿಯರ ಯೋಗ

ಕ್ಷೇಮ ನೋಡುವಂತಾದರೆ ಹಿಗ್ಗುವುದು ನನ್ನ ಮನ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ





No comments:

Post a Comment

Videos