Tuesday, September 22, 2020

ನಂಬಿಕೆ ದ್ರೋಹ ಕಥೆ ೨೧/೦೯/೨೦೨೦

 *ಮಕ್ಕಳ ಕಥೆ*

*"ನಂಬಿಕೆ ದ್ರೋಹ"*


ಒಂದು ದಟ್ಟವಾದ ಕಾಡು ಅಲ್ಲಿ ಸಾವಿರಾರು ಪ್ರಾಣಿಗಳು ಪಕ್ಷಿಗಳು ವಾಸವಾಗಿದ್ದವು. ಕಾಡಿನಲ್ಲಿನ ತರತರದ ರುಚಿ ರುಚಿಯಾದ ಹಣ್ಣುಗಳು, ಗೆಡ್ಡೆ ಗೆಣಸುಗಳು ಹೀಗೆ ನಾನಾ ಬಗೆಯ ಗಿಡಮರಗಳಿಂದ ಕಿಕ್ಕಿರಿದು ತುಂಬಿದ್ದ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದವು. ಅಲ್ಲದೆ ಸದಾ ಗಿಡಮರಗಳಿಗೆ ನೀರುಣಿಸುವ ಜಲಪಾತಗಳು ರಭಸವಾಗಿ ಹರಿಯುತ್ತಿದ್ದವು. ಅಲ್ಲದೆ ಅಲ್ಲಿ ನವಿಲುಗಳ ಹಿಂಡು ನಾಟ್ಯವಾಡುತ್ತ ಇನ್ನಷ್ಟು ಸೊಗಸನ್ನು ಹೆಚ್ಚಿಸಿದ್ದವು. 

ಹೀಗಿರುವಾಗ ಒಂದು ದೊಡ್ದ ಮರದ ಪೊಟರೆಯಲ್ಲಿ ಗಂಡು ಮತ್ತು ಹೆಣ್ಣು ಗುಬ್ಬಿಗಳು ವಾಸವಾಗಿದ್ದವು. ಅವು ಯಾವಾಗಲೂ ಸಂತೋಷಭರಿತವಾಗಿ ಚಿಲಿಪಿಲಿಯೊಂದಿಗೆ ನಿತ್ಯವು ನಲಿಯುತ್ತಿದ್ದವು. ಪಕ್ಕದಲ್ಲಿ ಒಂದು ನದಿ ಹರಿಯುತ್ತಿತ್ತು. ಆ ನದಿಯಲ್ಲಿ ಒಂದು ಮೊಸಳೆಯು ವಾಸವಾಗಿತ್ತು. ಆ ಒಂದು ಮೊಸಳೆಯ ಪರಿಚಯದೊಂದಿಗೆ ಗುಬ್ಬಿಗಳು ಒಳ್ಳೆಯ ಸ್ನೇಹಿತರಾದವು. ಗುಬ್ಬಿಗಳು ನಿತ್ಯ ಹಾರಿ ಹೊರಗಿನ ಪ್ರಪಂಚವನ್ನ ಸುತ್ತಿಬರುತ್ತಿದ್ದರಿಂದ ಹೊರಗಡೆ ನಡೆಯುವ ಸಮಾಚಾರಗಳೆಲ್ಲ ತಿಳಿದುಕೊಂಡು ಬರುತ್ತಿದ್ದವು. ಬಂದು ತಮ್ಮ ಗೆಳೆಯ ಮೊಸಳೆಗೆ ತಿಳಿಸುತ್ತಿದ್ದವು.

ಹೀಗೆ ಕಾಲ ಕಳೆಯುತ್ತಿರಲು ಗುಬ್ಬಿಗಳು ಒಂದಕ್ಕೊಂದು ಅಗಲದೆ ಅನ್ಯೂನ್ಯವಾಗಿರುವುದನ್ನ ಕಂಡ ಮೊಸಳೆಯು ಸಹಿಸಲಾರದೆ ಅವುಗಳ ಸಂಬಂಧವನ್ನ ಕದಡಿಸಬೇಕು ಅವು ಎರೆಡು ಸೇರದಂತೆ ಮಾಡಬೇಕು, ನಂತರ ಅವು ಎರೆಡು ಗುಬ್ಬಿಗಳನ್ನು ತಿಂದು ಸವಿಯಬೇಕೆಂದು ಯೋಚಿಸಿತು. ಮೊದಲೇ ಮೋಸದ ಬುದ್ಧಿಯ ಮೊಸಳೆ ದಿನಾಲು ಗುಬ್ಬಿಗಳ ಹತ್ತಿರ ಬಂದು ತನ್ನ ಮೋಸದ ಸ್ನೇಹವನ್ನ ಗಟ್ಟಿಗೊಳಿಸಿಕೊಂಡಿತು. ಅಲ್ಲದೆ ದಿನಾಲು ತಾವು ಎಲ್ಲಕಡೆ ಸುತ್ತಿಕೊಂಡು ಬರ್ತೀರಿ ಮನುಷ್ಯರ ಚಟುವಟಿಕೆಗಳನ್ನೆಲ್ಲಾ ನೋಡಿ ಬರ್ತೀರಿ. ಹೇಗಿದ್ದಾರೆ ನಿಮ್ಮ ನಾಡ ಜನಗಳು ಎಂದು ವ್ಯಂಗ್ಯವಾಗಿ ಕೇಳಿತು ಆಗ ಗೆಳೆಯ ಎಂಬ ನಂಬಿಕೆಯಿಂದ ಗುಬ್ಬಿಗಳು ಯಾವುದನ್ನು ಹೇಳಬೇಕು..? ಯಾವುದನ್ನು ಬಿಡಬೇಕು ಗೆಳೆಯ..! ಜಗದ ಜನ ಒಬ್ಬರಿಗೊಬ್ಬರು ಮೋಸ ಮಾಡುವದನ್ನು ಬಿಡಲಾರರು ಈ ಹಾಳು ಮನುಜರು ಎಂದು ಹೇಳಿತು.

ಒಮ್ಮೆ ಒಂದು ಊರಿನಲ್ಲಿ ಏನಾಯ್ತು ಗೊತ್ತಾ ಒಬ್ಬ ವ್ಯಕ್ತಿಯು ತನ್ನ ಹಲವಾರು ದಿನಗಳಿಂದ ಲಾಲನೆ ಪಾಲನೆ ಪೋಷಣೆ ಮಾಡಿ ಬೆಳೆಸಿದ ಬಾಳೆಯ ಗಿಡಗಳು ರಸಭರಿತ ಹಣ್ಣುಗಳಿಂದ ತುಂಬಿದ್ದವು. ಇನ್ನೇನು ಆ ತೋಟದ ಮಾಲೀಕ ಎರಡು - ಮೂರು ದಿನಗಳಲ್ಲಿ ಮಾರಿಕೊಂಡು ಬರಬೇಕೆಂದು ಬಯಸಿದ್ದ ಅವನ ಸ್ನೇಹವನ್ನು ಸಂಪಾದಿಸಿದ ವಂಚಕರು ಅವನನ್ನು ನಂಬಿಸುವಂತೆ ನಟಿಸಿದರು. ಆಗ ಅವರನ್ನು ನಂಬಿದ ತೋಟದ ಮಾಲೀಕ ಊರಲ್ಲಿ ಬಾಳೆ ಕಟ್ಟುಮಾಡಲು ಹಾಳುಗಳನ್ನು ಕೇಳಿ ಬರುವೆ ಅಲ್ಲಿಯವರೆಗೆ ನೀವು ನೋಡುತ್ತಿರಿ ಎಂದು ಹೇಳಿ ಹೋದ.

ಅದೇ ಸಮಯ ಕಾಯುತ್ತಿದ್ದ ವಂಚಕರು ಅವನು ಬರುವಷ್ಟರಲ್ಲಿ ಎಲ್ಲಾ ಬಾಳೆಯನ್ನು ಕಡಿದು ಹಾಕಿ ರಸಭರಿತ ಹಣ್ಣುಗಳನ್ನು ದೋಚಿಕೊಂಡು ನಂಬಿಕೆ ದ್ರೋಹ ಮಾಡಿ ಪರಾರಿಯಾಗಿದ್ದರು ನಾವುಗಳು ಬಾಳೆಗಿಡದಲ್ಲಿ ಕುಳಿತು ಆ ದೃಶ್ಯ ನೋಡಿ ಈ ಮಾನವರು ಎಷ್ಟು ನೀಚರಾಗಿದ್ದಾರಲ್ಲಾ ಎಂದು ನೆನಸಿಕೊಂಡರೆ ಬಹಳ ದುಃಖವಾಯಿತು ಗೆಳೆಯ ಅವರು ಯಾವತ್ತೂ ಉದ್ದಾರ ಆಗುವುದಿಲ್ಲ ಒಬ್ಬ ಬಡವನ ಕಣ್ಣಲ್ಲಿ ನೀರು ತರಿಸಿದ್ದಾರೆ. ಅವರಿಗೂ ಒಬ್ಬ ಬುದ್ದಿಕಲಿಸುವವನು ಹುಟ್ಟುತ್ತಾರೆ ಎಂದು ಮೊಸಳೆಗೆ ಹೇಳಿದವು.

ಮೊದಲೇ ಕುಟಿಲ ಬುದ್ಧಿಯ ಮೊಸಳೆಯು ನಾನೇ ಮೋಸಗಾರನೆಂದು ತಿಳಿದಿದ್ದೆ ಈ ಮಾನವರು ನನಗಿಂತಲೂ ಅತೀ ಮೋಸಗಾರರಿದ್ದಾರೆ ಎಂದು ಅರಿತು ಮನದಲ್ಲೇ ತನ್ನ ಗುಣವನ್ನ ನೆನೆದು ಛೇ ನಾನು ಈ ರೀತಿಯ ಮೋಸ ಮಾಡುವುದು ಸರಿಯಲ್ಲ ಇವುಗಳ ಜೊತೆಗೆ ಸ್ನೇಹದಿಂದ ಇದ್ದು ಎಲ್ಲರ ಪ್ರೀತಿ ಗಳಿಸೋಣ ಎಂದು ಚಿಂತಿಸಿ ತನ್ನ ದುಷ್ಟಗುಣ ಮರೆತು ಒಳ್ಳೆಯ ತನದ ಬೆಳವಣಿಗೆಯಲ್ಲಿ ನಡೆಯಿತು.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*

No comments:

Post a Comment

Videos